ಅರಕಲಗೂಡು : ಇಲ್ಲಿನ ನಾಯಕರು 35 ವರ್ಷಗಳಿಂದ ಯಾರನ್ನೂ ಬೆಳೆಯಲು ಬಿಡದೆ ರಾಜಕೀಯವಾಗಿ ಹೊಸಕಿ ಹಾಕುತ್ತಿದ್ದಾರೆ, ಇದು ಎಲ್ಲರಿಗೂ ಅರಿವಿದೆ. ಇದಕ್ಕಾಗಿ ತಾಲ್ಲೂಕಿನ ಜನತೆ ಬದಲಾವಣೆ ಬಯಸುತ್ತಿದ್ದು ಕಾಂಗ್ರೆಸ್ ಪಕ್ಷವನ್ನು ವ್ಯವಸ್ಥಿತವಾಗಿ ಸಂಘಟಿಸುವ ಮೂಲಕ ಅಧಿಕಾರಕ್ಕೆ ತರುವುದು ತಮ್ಮ ಮೊದಲ ಆಧ್ಯತೆಯಾಗಿದೆ ಎಂದು ಪಕ್ಷದ ಮುಖಂಡ ಎಚ್.ಪಿ.ಶ್ರೀಧರ್ ಗೌಡ ತಿಳಿಸಿದರು.
ಪಟ್ಟಣದ ಗ್ರಾಮದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಶುಕ್ರವಾರ ಡಿಜಿಟಲ್ ಸದಸ್ಯತ್ವ ನೊಂದಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದ ತಾವು ವೃತ್ತಿಗೆ ರಾಜೀನಾಮೆ ನೀಡಿ ತಮ್ಮ ಸೋಧರ ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಶ್ರೀನಿವಾಸ್ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಂಸದ ಡಿ.ಕೆ ಸುರೇಶ್ ಹಾಗೂ ಪಕ್ಷದ ಉಪಾಧ್ಯಕ್ಷ ಧ್ರುವ ನಾರಾಯಣ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ತಾಲ್ಲೂಕಿನ ಪ್ರತಿ ಗ್ರಾಮಕ್ಕೂ ತೆರಳಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸುವುದಾಗಿ ಹೇಳಿದರು.
ಕಾವೇರಿ, ಹೇಮಾವತಿ ಎರಡು ನದಿಗಳು ಹರಿಯುತ್ತಿರುವ ತಾಲ್ಲೂಕು ಅಭಿವೃದ್ಧಿಯಲ್ಲಿ ಜಿಲ್ಲೆಯಲ್ಲೆ ಹಿಂದುಳಿದ ತಾಲ್ಲೂಕಾಗಿದೆ. ಇದಕ್ಕೆ ಕಾರಣ ಎನೆಂಬುದು ಜನರ ಅರಿವಿಗೆ ಬಂದಿದೆ, ರಾಜಕೀಯಕ್ಕೆ ಈಗತಾನೆ ಕಾಲಿಡುತ್ತಿರುವ ತಾವು ತಾಲ್ಲೂಕಿನಲ್ಲಿ ಕಳೆದ 35 ವರ್ಷಗಳಿಂದ ಅಧಿಕಾರ ನಡೆಸುತ್ತಿರುವವರ ವಿರುದ್ದ ತಾವು ಹೋರಾಟ ನಡೆಸಬೇಕಿದೆ ಎಂಬ ಅರಿವಿದೆ. ಯುವ ಸಮೂಹ ಬದಲಾವಣೆಗೆ ತುಡಿಯುತ್ತಿದೆ. ಪಕ್ಷವನ್ನು ಸಂಘಟಿಸುವುದಷ್ಟೆ ಅಲ್ಲ ಕಾರ್ಯಕರ್ತರ ಹಿತ ಕಾಯುವುದು ತಮ್ಮ ಮೊದಲ ಆಧ್ಯತೆಯಾಗಿದೆ ಎಂದರು.
ಕೆಪಿಸಿಸಿ ಮಾಜಿ ಪ್ರದಾನ ಕಾರ್ಯದರ್ಶಿ ಶೇಷೇಗೌಡ ಮಾತನಾಡಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪಟ್ಟಣದಲ್ಲಿ ಕಾಂಗ್ರೆಸ್ ಕಚೇರಿ ಯನ್ನು ಶೀಘ್ರದಲ್ಲೆ ತರೆದು ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆಯಲಿದೆ ಎಂದರು.
ತಾಪಂ ಮಾಜಿ ಉಪಾಧ್ಯಕ್ಷ ನಾಗರಾಜ್ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ.ಶ್ರೀನಿವಾಸ್, ಪಪಂ ಮಾಜಿ ಉಪಾಧ್ಯಕ್ಷ ಸಲೀಂ ಅಹಮದ್, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಜಮೀರ್ ಅಹಮದ್, ಪಪಂ ಸದಸ್ಯ ಸುಬಾನ್ ಷರೀಪ್, ಕೆಪಿಸಿಸಿ ಸದಸ್ಯ ಮಂಜುನಾಥ್, ಮುಖಂಡರಾದ ಶೆಟ್ಟಿಗೌಡ, ಕೇಶವೇಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮುಣ್ನ ಗ್ರಾಮ ದೇವತೆ ದೊಡ್ಡಮ್ಮ ದೆವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖಂಡರು ಮೆರವಣಿಗೆಯಲ್ಲಿ ತೆರಳಿ ಸಾಹಿತಿ ಅನಕೃ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಾಜಿ ನೀರಾವರಿ ಸಚಿವ ಎಚ್.ಎನ್,ನಂಜೇಗೌಡರ ಪುತ್ಥಳಿಗಳಿಗೆ ಮಾಲಾರ್ಪಣೆ ನಡೆಸಿದರು. ಪ್ರಮುಖ ವೃತ್ತಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
0 Comments