ಅರಕಲಗೂಡು: ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ರಸ್ತೆ ವಿಸ್ತೀರ್ಣ ಕಡಿತಗೊಳಿಸದೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಶಾಸಕ ಎ.ಟಿ. ರಾಮಸ್ವಾಮಿ ಕಾರಿಗೆ ಮುತ್ತಿಗೆ ಹಾಕಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಬಸವಾಪಟ್ಟಣ ಮಾರ್ಗವಾಗಿ ಹಾದು ಹೋಗಿದೆ. ಕಳೆದ ಹಲವಾರು ದಶಕಗಳಿಂದ ದುರಸ್ತಿ ಕಾಣದೆ ಗುಂಡಿ ಬಿದ್ದಿದ್ದ ರಸ್ತೆ ಇದೀಗ ಅಭಿವೃದ್ಧಿ ಕಾಣುತ್ತಿದೆ. ಆದರೆ ಬಸವಾಪಟ್ಟಣ ಭಾಗದಲ್ಲಿ ರಸ್ತೆ ವಿಸ್ತೀರ್ಣ ಕಡಿತಗೊಳಿಸಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ, ಹಾಳಾಗುತ್ತಿರುವ ರಸ್ತೆ ಸ್ಥಿತಿ ಸರಿಪಡಿಸಿ ಎಂದು ಆರೋಪಿಸಿ ಗ್ರಾಮಸ್ಥರು ಊರಿನ ಪ್ರಮುಖ ಬೀದಿಗಳಲ್ಲಿ ತಮಟೆ ಬಾರಿಸುತ್ತಾ ಅಯ್ಯಯ್ಯೋ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಸಾಗಿ ಹಳೇ ಸಂತೆಮಾಳದ ಸರ್ಕಾರಿ ಆಸ್ಪತ್ರೆ ಬಳಿ ಕೆಸರು ಗುಂಡಿ ರಸ್ತೆಯಲ್ಲಿ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಗಡಿ ಭಾಗದಿಂದ ಕೇರಳಾಪುರ, ಬಸವಾಪಟ್ಟಣ, ರಾಮನಾಥಪುರ, ಕೊಣನೂರು ಮಾರ್ಗವಾಗಿ ಸೋಮವಾರಪೇಟೆ ತನಕ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಬಸವಾಪಟ್ಟಣದಲ್ಲಿ ಮಾತ್ರ ಚತುಷ್ಪತ ರಸ್ತೆ ನಿರ್ಮಿಸದೆ ನಿರ್ಲಕ್ಷಿö್ಯಸಲಾಗಿದೆ. ಕೆಶಿಪ್ ಇಂಜಿನಿಯರ್ ಗಮನಕ್ಕೆ ತಂದರೂ ತಲೆಕೆಡಿಸಿಕೊಳ್ಳುತ್ತಿಲ್ಲ. ರಸ್ತೆ ಹಾಳಾಗಿದ್ದರೂ ಕ್ಷೇತ್ರದ ಜನಪ್ರತಿನಿಧಿ ಮೌನಕ್ಕೆ ಶರಣಾಗಿದ್ದಾರೆ. ಗ್ರಾಮಸ್ಥರು ಬೇಡಿಕೆಗೆ ಸ್ಪಂದಿಸದ ಶಾಸಕ ಎ.ಟಿ. ರಾಮಸ್ವಾಮಿ ಇದ್ದೂ ಇಲ್ಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸ್ಥಳಕ್ಕೆ ಧಾವಿಸಿದ ಶಾಸಕ ಎ.ಟಿ. ರಾಮಸ್ವಾಮಿ ಅವರ ಕಾರಿಗೆ ಮಹಿಳೆಯರು ಮತ್ತು ಪ್ರತಿಭಟನಾಕಾರರು ಮುಗಿಬಿದ್ದು ಆಕ್ರೋಶ ಹೊರಹಾಕಿದರು. ರಸ್ತೆಗೆ ಡಿವೈಡರ್ ಹಾಕಿ ಚತುಷ್ಪಥ ರಸ್ತೆ ನಿರ್ಮಿಸಬೇಕು. ವಾಹನಗಳ ಸಂಚಾರ ಸುಗಮವಾಗಿ ರಸ್ತೆ ಅಪಘಾತಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೇಗಾಡಿದ ಶಾಸಕ: ಬಸವಾಪಟ್ಟಣದಲ್ಲಿ ರಸ್ತೆ ವಿಸ್ತೀರ್ಣ ಕಡಿತಗೊಳಿಸದೆ ಡಿವೈಡರ್ ಅಳವಡಿಸಿ ಚತುಷ್ಪತ ಹೆದ್ದಾರಿ ನಿರ್ಮಿಸುವಂತೆ ಕೆಶಿಪ್ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಪ್ರತಿಭಟನಾಕರರು ಶಾಸಕರ ಕಾರು ಸುತ್ತುವರಿದು ಮಾತಿನ ಚಕಮಕಿ ನಡೆಸಲು ಮುಂದಾದರು. ಪ್ರತಿಭಟನಾನಿರತರ ವರ್ತನೆಗೆ ಸಿಟ್ಟಾದ ಶಾಸಕರು ಯುವಕರಿಬ್ಬರ ಮೇಲೆ ಕಿಡಿಕಾರಿ, ಡಿಪಿಆರ್ ಪ್ರಕಾರ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೆತ್ತಗೆ ಮಾತನಾಡು, ಏನ್ ಮೊಬೈಲ್ ವಿಡಿಯೋ ಮಡುತ್ತಾ ಟೋಪಿ ಎಸೆಯುತ್ತಾ ಮಾತನಾಡುತ್ತಿದ್ದಿಯಲ್ಲ, ಸರಿಯಾಗಿ ಮಾತನಾಡು ಎಂದು ಕೆಂಡಕಾರಿ ಅದೇನು ಮಾಡಿಕೋ ಎನ್ನುತ್ತಾ ಕಾರು ಮುಂದೆ ಚಲಾಯಿಸಿ ಅಲ್ಲಿಂದ ಕಾಲ್ಕಿತ್ತರು.
ಶಾಸಕರ ಕುರಿತು ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ ಎಂದು ಗ್ರಾಪಂ ಅಧ್ಯಕ್ಷ ಪ್ರಶಾಂತ್ ಪ್ರತಿಭಟನಾಕಾರರ ವಿರುದ್ದ ಗರಂ ಆದರು. ಈ ಪ್ರತಿಭಟನಾಕರರು ಮತ್ತು ಅಧ್ಯಕ್ಷ ಪ್ರಶಾಂತ್ ನಡುವೆ ಪರಸ್ಪರ ವಾಗ್ವಾದ ನಡೆದು ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಕೆಶಿಪ್ ಇಂಜಿನಿಯರ್ ಶಿವರಾಜ್ ಮಾತನಾಡಿ, ಡಿಪಿಆರ್ ಪ್ರಕಾರ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದರು. ಇದರಿಂದ ಕುಪಿತರಾದ ಪ್ರತಿಭಟನಾಕಾರರು ಬಸವಾಪಟ್ಟಣದಲ್ಲಿ ರಸ್ತೆ ಅಭಿವೃದ್ಧಿ ಪಡಿಸಿ ಡಿವೈಡರ್ ಅಳವಡಿಸುವ ಭರವಸೆ ನೀಡುವ ತನಕ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಘೋಷಣೆ ಕೂಗಲಾರಂಭಿಸಿದರು. ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಇಂಜಿನಿಯರ್ ಭರವಸೆ ನೀಡಿದ ತರುವಾಯ ಗ್ರಾಮಸ್ಥರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.
0 Comments