ಅರಕಲಗೂಡು: ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರಾ ಕಡಿಮೆ ಇದ್ದು ವಿದ್ಯಾವಂತ , ಸ್ವತಂತ್ರ ಮನೋಭಾವ ಹೊಂದಿರುವ ಮಹಿಳೆಯರು ರಾಜಕಾರಣಕ್ಕೆ ಬರುವ ಮೂಲಕ ಕಲುಷಿತ ಗೊಂಡಿರುವ ಸಾಮಾಜಿಕ ವ್ಯವಸ್ಥೆಯನ್ನು ಉತ್ತಮ ಗೊಳಿಸುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕಿದೆ ಎಂದು ಕೆಆರ್ ಎಸ್ ಪಕ್ಷದ ಬೆಂಗಳೂರು ಮಹಾನಗರ ಮಹಿಳಾ ಘಟಕದ ಕಾರ್ಯದರ್ಶಿ ಜನನಿ ವತ್ಸಲ ತಿಳಿಸಿದರು.
ಜನಪರ ಕಾಳಜಿ ಹೊಂದಿದ ಪ್ರಮಾಣಿಕ ವಿದ್ಯಾವಂತ ಮಹಿಳೆಯರು ದೇಶದಲ್ಲಿ ಪುರುಷರಷ್ಟೆ ಸಮಾನರಾಗಿದ್ದರೂ ಪ್ರಮುಖ ರಾಜಕೀಯ ಪಕ್ಷಗಳು ಸೂಕ್ತ ಅವಕಾಶ ನೀಡದೆ ಮಹಿಳಾ ಸಬಲೀಕರಣ ಕುರಿತು ಆಶ್ವಾಸನೆಗಳನ್ನು ನೀಡುತ್ತಾ ಕಾಲ ಹರಣ ಮಾಡುತ್ತಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.
ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ , ದೌರ್ಜನ್ಯಗಳು ನಡೆಯುತ್ತಿದೆ. ಮಹಿಳೆಯರು ತಮ್ಮಮೇಲಿನ ಶೋಷಣೆಯ ವಿರುದ್ದ ಧ್ವನಿ ಎತ್ತಲು ಸಾಧ್ಯವಾಗದೆ ನೋವನ್ನು ಸಹಿಸಿಕೊಂಡು ಬದುಕುತ್ತಿದ್ದಾರೆ. ಇಂತಹ ವಿಷಮ ಸ್ಥಿತಿಯಲ್ಲಿ ಮಹಿಳೆಯರು ರಾಜಕೀಯ ಶಕ್ತಿಗಳಿಸುವ ಮೂಲಕ ದೌರ್ಜನ್ಯ ಶೋಷಣೆಗಳಿಗೆ ಕಡಿವಾಣ ಹಾಕಿ ಮಹಿಳೆಯರ ನೆರವಿಗೆ ಬರಬೇಕಿದೆ ಎಂದರು.
ಇತರೆ ರಾಜಕೀಯ ಪಕ್ಷಗಳಿಗಿಂತ ವಿಭಿನ್ನ ರಾಜಕಾರಣ ಮಾಡುವ ಮೂಲಕ ಸಮಾಜಿಕ ಪ್ರಜ್ಞೆ ಮೂಡಿಸುತ್ತಿರುವ ಕೆಆರ್ ಎಸ್ ಪಕ್ಷ ಮಹಿಳೆಯರಿಗೆ ರಾಜಕೀಯವಾಗಿ ಹೆಚ್ಚಿನ ಅವಕಾಶಗಳನ್ನು ನೀಡಿ ರಾಜಕೀಯ ಕ್ಷೇತ್ರಕ್ಕೆ ಸ್ವಾಗತಿಸುವ ಉದ್ದೇಶದಿಂದ ಅಭಿಯಾನ ಆರಂಭಿಸಿದೆ. ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷ ಶೇ 33 ರಷ್ಟು ಸ್ಥಾನಗಳನ್ನು ಮಹಿಳೆರಿಗೆ ನೀಡಲಿದೆ. ಮಂಡ್ಯ, ಚಾಮರಾಜ ನಗರ ಜಿಲ್ಲೆಗಳಲ್ಲಿ ಅಭಿಯಾನ ಪೂರ್ಣ ಗೊಳಿಸಿ ಹಾಸನ ಜಿಲ್ಲೆಯಲ್ಲಿ ಪ್ರಾರಂಭಿಸಿದ್ದು ಇ;ಲ್ಲಿಂದ ತುಮಕೂರಿಗೆ ತೆರಳುವುದಾಗಿ ಹೇಳಿದರು.
ಕೋಲಾರ ಜಿಲ್ಲಾ ಸಮಿತಿ ಅಧ್ಯಕ್ಷೆ ಇಂದಿರಾ ರೆಡ್ಡಿ, ಧಾರವಾಡ ಜಿಲ್ಲಾ ಸಮಿತಿ ಅಧ್ಯಕ್ಷೆ ಸುಮಿತ್ರ ಹಳ್ಳಿಕೇರಿ, ಬೆಂಗಳೂರು ಮಹಾನಗರ ಮಹಿಳಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಕ್ಷ್ಮಿ ಚನ್ನಕೇಶವ, ಜಿಲ್ಲಾ ಘಟಕದ ಅಧ್ಯಕ್ಷ ಕೇಶವಮೂರ್ತಿ ಗೋಷ್ಠಿಯಲ್ಲಿದ್ದರು.
0 Comments